ಮಧೂರಿನಲ್ಲಿ ಯಕ್ಷಕಲಾ ಸಾಧಕರಿಗೆ ಸಮ್ಮಾನ, ಅಭಿನಂದನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 29 , 2013
|
ಒಕ್ಟೋಬರ್ 29 , 2013
|
ಮಧೂರಿನಲ್ಲಿ ಯಕ್ಷಕಲಾ ಸಾಧಕರಿಗೆ ಸಮ್ಮಾನ, ಅಭಿನಂದನೆ
ಕಾಸರಗೋಡು :
ಯಕ್ಷಮಿತ್ರರು ಮಧೂರು ಹಾಗೂ ಗಟ್ಟಿ ಸಮಾಜ ಪರಕ್ಕಿಲ ಇದರ ಸಂಯುಕ್ತಾಶ್ರಯದಲ್ಲಿ ಮಧೂರಿನ ಗಟ್ಟಿ ಸಮಾಜ ಸಭಾಭವನದಲ್ಲಿ ದೀಪಾವಳಿ ಪ್ರಯುಕ್ತ ಜರಗಿದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವತ ಹಂಸ ಬಿರುದಾಂಕಿತ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಪುಂಡುವೇಷದ ಗಂಡುಗಲಿಯಾಗಿ ಪ್ರಸಿದ್ಧರಾದ ಮಧೂರು ಉದಯ ನಾವಡ ಇವರಿಗೆ ಸಂಘಾಟಕರ ವತಿಯಿಂದ ಹಾಗೂ ಯಕ್ಷಗಾನ ವೇಷಧಾರಿಯಾಗಿ ಸುಪ್ರಸಿದ್ಧರಾದ ಸುಬ್ರಾಯ ಹೊಳ್ಳ ಕಾಸರಗೋಡು ಇವರಿಗೆ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದಲೂ ಅಭಿನಂದನೆಗಳೊಂದಿಗೆ ಸಮ್ಮಾನ ನಡೆಯಿತು.
ಭಾಗವತಿಕೆಯಲ್ಲಿ ಈ ಶತಮಾನದ ಭಾಗವತರೆಂಬ ಹೆಗ್ಗಳಿಕೆಯೊಂದಿಗೆ ಪ್ರಸಿದ್ಧಿ ಪಡೆದ ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಸಂಘಟಕರ ಪರವಾಗಿ ಸಮ್ಮಾನಿಸಿದರು. ಕೃಷ್ಣ ಪ್ರಸಾದ ಅಡಿಗ ಸಮ್ಮಾನ ಪತ್ರ ವಾಚಿಸಿದರು. ಮಧೂರು ಉದಯ ನಾವಡರನ್ನು ಉಳಿಯತ್ತಾಯ ವಿಷ್ಣು ಆಸ್ರ ಅವರೊಂದಿಗೆ ನಿಡ್ಲೆ ಗೋವಿಂದ ಭಟ್, ಸುಂದರ ಕೃಷ್ಣ ಮಧೂರು ಮೊದಲಾದವರು ಸಂಯುಕ್ತವಾಗಿ ಸಮ್ಮಾನಿಸಿದರು. ಗಣೇಶ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು.
ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ತಿರುಗಾಟದಲ್ಲಿರುವ ಹೊಸ ನಗರ ಮೇಳದ ಮೆನೇಜರ್ ಆಗಿ ನಿಯುಕ್ತಿಗೊಂಡಿರುವ ಕಾಸರಗೋಡು ಸುಬ್ರಾಯ ಹೊಳ್ಳ ಅವರನ್ನು ಮಂಡಳಿ ವತಿಯಿಂದ ದಂಪತಿ ಸಮೇತ ಅಭಿನಂದಿಸಿ ಗೌರವಿಸಲಾಯಿತು. ಸುಬ್ರಾಯ ಹೊಳ್ಳರ ಕುರಿತು ಪತ್ರಕರ್ತ ಶೇಣಿ ಬಾಲಮುರಳೀ ಅಭಿನಂದನಾ ಭಾಷಣ ಮಾಡಿದರು. ನಿಡ್ಲೆ ಗೋವಿಂಧ ಭಟ್ ಸಮ್ಮಾನದ ಕುರಿತು ಪ್ರಾಸ್ತಾವಿಕ ಮಾತನಾಡಿ ಸುಬ್ರಾಯ ಹೊಳ್ಳರು ಕೇವಲ ಒಬ್ಬ ವೇಷಧಾರಿಗಿಂತಲೂ ಮಿಗಿಲಾಗಿ ಯಕ್ಷಗಾನದ ಸವ್ಯಸಾಚಿಯಾಗಿ ಬೆಳೆದವರು. ಅವರು ಮಂಡಳಿಯ ಜತೆಗಿರುವುದು ನಮಗೆ ಹೆಮ್ಮೆ ಎಂದರು. ಖ್ಯಾತ ಭಾಗವತ ರಾಮಕೃಷ್ಣ ಮಯ್ಯ ಶಿರಿಬಾಗಿಲು ಸಮ್ಮಾನ ಪತ್ರ ವಾಚಿಸಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಸುಂದರ ಕೃಷ್ಣ ಮಧೂರು, ಗಣೇಶ ಗಟ್ಟಿ ಮನ್ನಿಪ್ಪಾಡಿ, ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಎಂ.ನಾ.ಚಂಬಲ್ತಿಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಿಡ್ಲೆ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ಶ್ರೀ ಕೃಷ್ಣ ಲೀಲೆ -ಕಂಸವಧೆ, ಚಂದ್ರಾವಳಿ ವಿಲಾಸ - ಕುಶಲವ ಕಾಳಗ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಜರಗಿತು. ಇದರೊಂದಿಗೆ ಸೌತಡ್ಕ ಮಹಾಗಣಪತಿ ಸನ್ನಿಧಿಯಿಂದ ಈ ಬಾರಿಯ ತಿರುಗಾಟ ಆರಂಭಿಸಿದ್ದ ಮಂಡಳಿಯ ಪ್ರವಾಸ ಮಧೂರು ಗಣಪತಿ ಸನ್ನಿಧಿ ಸಮಕ್ಷಮದಲ್ಲಿ ಮುಕ್ತಾಯಗೊಂಡಿತು.
ಕೃಪೆ :http://www.udayavani.com/
|
|
|